Monday 26 November, 2012

Competitive Examination Preparation - Article in Vijaykarnataka 26 Nov 2012





ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?


0
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?
* ಯಾಜ್ಞವಲ್ಕ್ಯ
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ತುಂಬಾ ಸುಲಭದ ಸಬ್ಜೆಕ್ಟ್ ಕಣ್ರೀ. ಹಾಲಪ್ಪ ಅವರ ಪುಸ್ತಕ ಓದಿದ್ರೆ ಸಾಕು. ಒಂದಷ್ಟು ನೋಟ್ಸ್ ರೆಡಿ ಮಾಡಿಟ್ಕೊಂಡ್ರೂ ನಡೆಯುತ್ತೆ, ಅಂತಾರೆ ಹೊಳಲ್ಕೆರೆಯ ತಿಪ್ಪೇಸ್ವಾಮಿ. ಓದಿರುವುದು ಫಿಸಿಕ್ಸ್ ಎಂಎಸ್ಸಿ. ಆದರೂ ತೆಗೆದುಕೊಂಡಿರುವುದು ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಜಿಯಾಗ್ರಫಿ.

ಕೋಚಿಂಗ್ ಸೆಂಟರ್ ಬಾಜೂಕಿನ ಝೆರಾಕ್ಸ್ ಸೆಂಟರ್‌ದಾಗ ಕೇಳ್ರೀ, ನಿಮಗೆ ಯಾವ ಸಬ್ಜೆಕ್ಟಿಂದು ಬೇಕೋ ಆ ಸಬ್ಜೆಕ್ಟಿಂದು ನೋಟ್ಸ್ ಝೆರಾಕ್ಸ್ ಸಿಕ್ಕುತ್ತಂತೇರಿ. ಗ್ರಾಮೀಣ ಅಭಿವೃದ್ಧಿ ಸಬ್ಜೆಕ್ಟಿಂದು ಬರೇ 150 ಪುಟ ನೋಟ್ಸ್ ಇದೇರಿ. ಚುಲೋ ಐತಿ. ಅಷ್ಟೇ ಓದಿದ್ರೆ ಸಾಕಂತಾರ‌್ರಿ ಗೆಳ್ಯಾರು. ಇದು ಧಾರವಾಡದ ಅಂಬುಕೇಶನ ಅಂಬೋಣ.

ಇದೇ ಡಿಸೆಂಬರ್ 15 ರಿಂದ 2013ರ ಜನವರಿ 06ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ ಮುಖ್ಯ (ಮೇನ್) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು ಡಿಸೆಂಬರ್ 15 ರಂದು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಡ್ಡಾಯ ಪತ್ರಿಕೆಗಳು, 16 ರಂದು ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ನಿಗದಿಯಾಗಿವೆ. 17 ರಿಂದ ಜನವರಿ 6 ರವರೆಗೆ ವಿವಿಧ ಐಚ್ಛಿಕ ವಿಷಯಗಳ ಎರಡೆರಡು ಪತ್ರಿಕೆಗಳು ಇರಲಿವೆ. (ವಿವರಗಳಿಗೆ ನೋಡಿ: http://kpsc.kar.nic.in) ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳು ಇಷ್ಟು ತಡವಾಗಿ ಆರಂಭವಾಗುತ್ತಿದ್ದು ಸಿದ್ಧತೆಗೆ ಸಾಕಷ್ಟು ಸಮಯ ಇದ್ದಾಗಲೂ ಯಾವುದೋ ಒಂದು ಪುಸ್ತಕ, ಮತ್ಯಾವುದೋ ನೋಟ್ಸ್‌ಗೆ ಜೋತುಬೀಳುವ ಪ್ರವೃತ್ತಿ ಈ ಸ್ಪರ್ಧಾರ್ಥಿಗಳಲ್ಲಿ ಏಕೆ ಬೆಳೆಯುತ್ತಿದೆ?

ಎಸ್‌ಡಿಎ, ಎಫ್‌ಡಿಎ, ಕೆಇಎಸ್, ಕೆಎಎಸ್, ಐಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂತೆಗೆ ಮೂರು ಮೊಳದಂತೆ ನೇಯ್ದಿರುವ, ಅರೆಬರೆ ಮಾಹಿತಿ ಪೂರೈಸುವ, ನೂರಾರು ಮುದ್ರಣ ದೋಷಗಳಿಂದ ಕೂಡಿದ ವಿವಿಧ ಗೈಡ್‌ಗಳನ್ನು ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಕಂಕುಳಲ್ಲಿ ಕುರಿ ಇಟ್ಟುಕೊಂಡು ಊರೆಲ್ಲಾ ಹುಡುಕಿದಂತೆ ತಮ್ಮ ಮನೆಯಲ್ಲಿಯೇ ಇರುವ ಅದ್ಭುತ ಮಾಹಿತಿ ಮೂಲಗಳನ್ನು ಬಿಟ್ಟು ಸಂತೆಯ ಸರಕಿಗೆ ಹುಡುಕುವುದು ಎಷ್ಟು ಸರಿ? ಅದರ ಬದಲಿಗೆ ಪ್ರತಿನಿತ್ಯ ಕನಿಷ್ಠ ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ದಿನಪತ್ರಿಕೆ ಓದುವ ಹವ್ಯಾಸ ಇದ್ದು, ಪ್ರತ್ಯೇಕವಾಗಿ ಟಿಪ್ಪಣಿ ಪುಸ್ತಕದಲ್ಲಿ ಆಯಾಯ ದಿನದ ಮುಖ್ಯ ಅಂಶಗಳನ್ನು, ಮಾಹಿತಿಯನ್ನು ಬರೆದಿಟ್ಟು ಕೊಂಡಲ್ಲಿ ಅದೇ ಒಂದು ಅತ್ಯುತ್ತಮವಾದ ಸಾಮಾನ್ಯ ಜ್ಞಾನ ಕೈಪಿಡಿ ಆಗುವುದರಲ್ಲಿ ಸಂಶಯವೇ ಇಲ್ಲ.

ಹಾಗೆಯೇ ಪ್ರತಿ ತಿಂಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಮಾಸಿಕಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವವರಿಗೆ ಅಂಕಿ-ಅಂಶಗಳು, ಪ್ರಚಲಿತ ಘಟನೆಗಳ ಮಾಹಿತಿ ಅಂಗೈ ನೆಲ್ಲಿಕಾಯಿಯಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಒಮ್ಮೆ ಕೂಲಂಕಷವಾಗಿ ಓದುವುದು, ಕೇಂದ್ರೀಯ ವಿದ್ಯಾಲಯಗಳಿಗೆ ನಿಗದಿಗೊಳಿಸಿರುವ ಸಿಬಿಎಸ್‌ಸಿ ಪಠ್ಯಕ್ರಮದ ಅನುಸಾರ ಸಿದ್ಧವಾಗಿ, ಎನ್‌ಸಿಇಆರ್‌ಟಿ ಯಿಂದ ಪ್ರಕಟವಾಗಿರುವ 6 ರಿಂದ 12ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳನ್ನು ಓದುವುದರಿಂದ ವಿಜ್ಞಾನ, ಸಮಾಜ ವಿಜ್ಞಾನ, ಭಾಷೆ, ಗಣಿತ, ಬೌದ್ಧಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಬಿಡಿಸುವುದು ಸುಲಭವಾಗುತ್ತದೆ. ಹಾಗೆಯೇ ಕನ್ನಡ ವಿಶ್ವಕೋಶ (ಪುಸ್ತಕ ಹಾಗೂ ಸಿ.ಡಿ.), ಎನ್‌ಸೈಕ್ಲೋಪಿಡಿಯಾ ಆಫ್ ಬ್ರಿಟಾನಿಕ, ಎನ್‌ಕಾರ್ಟ, ವರ್ಲ್ಡ್‌ಬುಕ್ ಸಿ.ಡಿಗಳನ್ನು ಗಮನಿಸುವುದು, ವಿಶ್ವವ್ಯಾಪಿ ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಜಾಲತಾಣ (ವೆಬ್‌ಸೈಟ್)ಗಳನ್ನು ಭೇಟಿಮಾಡುವುದು, ಮಾಹಿತಿ ಸಂಗ್ರಹಿಸುವ ಹವ್ಯಾಸ ಹೆಚ್ಚು ಅಂಕಗಳಿಸಿ ಆಯ್ಕೆಯಾಗಲು ನೆರವಾಗುತ್ತದೆ.

ಆದ್ರೆ ಆಡೋದು, ಆಗ್ದಿದ್ರೆ ನೋಡೋದು
ಇದೊಂಥರಾ ಫ್ಯಾಶನ್ ಆಗ್ಬಿಟ್ಟಿದೆ ಈಗ. ಪದವಿ/ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಕೆಲಸಕ್ಕೆಂದು ಹುಡುಕಾಡುತ್ತಲೇ ಜತೆಗೆ ಇರಲಿ ಅಂತ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರೂ ಜಾಸ್ತಿಯಾಗ್ತಿದ್ದಾರೆ. ಸೀರಿಯಸ್ ಆಗಿ ಅಟೆಂಪ್ಟ್ ಮಾಡೋರು ಸಿಗ್ತಾ ಇಲ್ಲ. ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ ಅನ್ನೋರಿಗೆ ಈ ಕಾಂಪಿಟಿಟಿವ್ ಎಗ್ಸಾಂ ಒಲಿಯೋಲ್ಲರೀ. ಡೈ ಹಾರ್ಡ್ ಮನೋಭಾವದವರು, ಮಾಡಿಯೇ ತೀರ‌್ತೇನೆ ಅನ್ನೋರು ಇಲ್ಲಿ ಯಶಸ್ವಿಯಾಗ್ತಾರೆ' ಎನ್ನುತ್ತಾರೆ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಛಾಯಾಪತಿ.

ಯೋಗ್ಯ ಅಭ್ಯರ್ಥಿಗಳ ಕೊರತೆ!
ಮಧುರ ಧ್ವನಿ, ಮೃದು ಮಾತು, ಸ್ಪಷ್ಟ ಉಚ್ಚಾರ, ಸರಳ ಇಂಗ್ಲಿಷ್ ಭಾಷೆ ಮತ್ತು ಸಂವಹನ ಕೌಶಲಗಳ ಸಮರ್ಥ ಬಳಕೆ, ನಸುನಗುತ್ತಾ ಎಲ್ಲರೊಂದಿಗೆ ಬೆರೆಯುವ ಸ್ವಭಾವದ, ಅಗತ್ಯಕ್ಕೆ ತಕ್ಕಷ್ಟು ಸಂಖ್ಯೆಯ ಅರ್ಹ ಉದ್ಯೋಗಿಗಳು ದೊರೆಯದೇ ಇರುವ ಪರಿಸ್ಥಿತಿ ಒಂದೆಡೆ ಇದ್ದರೆ, ಇನ್ನೊಂದೆಡೆ ನಿರುದ್ಯೋಗಿಗಳ ಮಹಾಪೂರವೇ ಇದೆ! ದಿ ಇಂಡಿಯಾ ಲೇಬರ್ ರಿಪೋರ್ಟ್ 2009 ರ ಅನ್ವಯ ಉದ್ಯೋಗಕ್ಕೆ ಆಯ್ಕೆಯಾಗುತ್ತಿರುವ ಶೇ 53 ರಷ್ಟು ಯುವಜನರಿಗೆ ಅಗತ್ಯ ಕೌಶಲದ ಕೊರತೆ ಇದೆ. 2010ರ ಫಿಕ್ಕಿ ಸಮೀಕ್ಷೆಯ ಪ್ರಕಾರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಲ್ಲಿ ಶೇ 75 ರಷ್ಟು ಮಂದಿಗೆ ಪ್ರಾಥಮಿಕ ಸಂವಹನ ಕೌಶಲಗಳಲ್ಲಿ ಪರಿಣತಿಯ ಕೊರತೆ ಇದೆ. ಉಳಿದ ಶೇ 25 ರಷ್ಟು ಮಂದಿಗೆ ಸೂಕ್ತ ತರಬೇತಿಯ ಅಗತ್ಯವಿದೆ.

ಅಭ್ಯರ್ಥಿಗಳು ಹೇಗಿರಬೇಕು?
ಉದ್ಯೋಗದಾತರು, ಉದ್ದಿಮೆದಾರರು ಎಂತಹ ಅಭ್ಯರ್ಥಿಗಳನ್ನು ಬಯಸುತ್ತಾರೆ? ಅಭ್ಯರ್ಥಿಗಳಲ್ಲಿ ಯಾವ ಯಾವ ಗುಣಗಳನ್ನು ಹುಡುಕುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸ್ವಲ್ಪ ಕಷ್ಟ. ಯಾರಿಗೆ ಯಾವ ರೀತಿಯ ಉದ್ಯೋಗಿಗಳ ಅಗತ್ಯವಿದೆಯೋ ಆ ರೀತಿಯ ಉದ್ಯೋಗ ನಿರ್ವಹಿಸುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಹುಡುಕುವುದು ಸಹಜ. ಬುದ್ಧಿ ಸೂಚ್ಯಂಕ (ಐಕ್ಯು-Intelligence Quotient) ಭಾವ ಸೂಚ್ಯಂಕ (ಇಕ್ಯು-Emotional Quotient) ಇಚ್ಛಾಶಕ್ತಿ ಸೂಚ್ಯಂಕ (ವಿಕ್ಯುVolition Quotient) ಜ್ಞಾನ/ತಿಳಿವಳಿಕೆ ಸೂಚ್ಯಂಕ (ಕೆಕ್ಯು/ಜಿಕೆಕ್ಯು-Knowledge Quotient/GK Quotient), ಸಮಕಾಲೀನತೆ ಸೂಚ್ಯಂಕ (ಸಿಕ್ಯು-Contemporary Quotient) ಆಧ್ಯಾತ್ಮ ಸೂಚ್ಯಂಕ (ಎಸ್‌ಕ್ಯು-Spiritual Quotient) ಗಳ ಜೊತೆ ಇತ್ತೀಚೆಗೆ ಉದ್ಯೋಗಾರ್ಹತೆಯ ಸೂಚ್ಯಂಕ (ಇಕ್ಯು- Employability Quotient) ಮೊದಲಾದವು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಬಳಕೆಯಾಗುತ್ತಿದೆ. ಮನಸ್ಸಿಟ್ಟು ಅಧ್ಯಯನದಲ್ಲಿ ತೊಡಗಿ, ಅಗತ್ಯ ಕೌಶಲಗಳನ್ನು ಈ ಯುವಜನತೆ ಬೆಳೆಸಿಕೊಳ್ಳಬೇಕು.

ಉದ್ಯೋಗಾರ್ಹತೆಯ 25 ಕೌಶಲಗಳು
1. ಮೌಖಿಕ ಸಂವಹನ ಕೌಶಲಗಳು
2. ಬರಹದ ಸಂವಹನ ಕೌಶಲಗಳು
3. ಪ್ರಾಮಾಣಿಕತೆ
4. ಟೀಂವರ್ಕ್/ಕೆಲಸಗಾರರೊಂದಿಗೆ ಹೊಂದಿಕೊಂಡು ಕೆಲಸಮಾಡುವ ಸಾಮರ್ಥ್ಯ
5. ಸ್ವಯಂ ಪ್ರೇರಣೆಯಿಂದ ಹೊಣೆಗಾರಿಕೆ ವಹಿಸಿಕೊಳ್ಳಲು ಮುಂದಾಗುವ ಸಾಮರ್ಥ್ಯ
6. ಜವಾಬ್ದಾರಿಯುತ ನಡವಳಿಕೆ /ವೃತ್ತಿಧರ್ಮ ಪಾಲನೆಯ ಸಾಮರ್ಥ್ಯ
7. ಸೃಜನಾತ್ಮಕವಾಗಿ /ವಸ್ತುನಿಷ್ಠವಾಗಿ ಆಲೋಚಿಸುವ ಸಾಮರ್ಥ್ಯ
8. ಸವಾಲನ್ನು ಎದುರಿಸುವ ಸಾಮರ್ಥ್ಯ
9. ಹೊಂದಾಣಿಕೆಯ ಮನೋಭಾವ/ಸಾಮರ್ಥ್ಯ
10. ನಾಯಕತ್ವದ ಗುಣಗಳು
11. ಇಂಟರ್‌ಪರ‌್ಸನಲ್ ಸ್ಕಿಲ್ಸ್
12. ಒತ್ತಡದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
13. ಪ್ರಶ್ನೆ ಮಾಡುವ ಸಾಮರ್ಥ್ಯ
14. ಸೃಜನಶೀಲತೆ
15. ಪ್ರಭಾವ ಬೀರುವ ಸಾಮರ್ಥ್ಯ
16. ಸಂಶೋಧನಾ ಕೌಶಲಗಳು
17. ಸಾಮಾನ್ಯ ಜ್ಞಾನ ಮತ್ತು ಔದ್ಯೋಗಿಕ ರಂಗದ ಮಾಹಿತಿ
18. ಸಮಸ್ಯಾ ನಿರ್ವಹಣ ಸಾಮರ್ಥ್ಯ
19. ಬಹುಸಂಸ್ಕೃತಿಯ ಕೌಶಲಗಳು
20. ಕಂಪ್ಯೂಟರ್ ಪರಿಣತಿ / ತಾಂತ್ರಿಕ ಪರಿಣತಿ
21. ಶೈಕ್ಷಣಿಕ / ಕಲಿಕಾ ಸಾಮರ್ಥ್ಯ
22. ವಿವರವಾಗಿ ಅರಿಯುವ ಸಾಮರ್ಥ್ಯ
23. ಕ್ವಾಂಟಿಟೇಟಿವ್ ಸಾಮರ್ಥ್ಯ
24. ಬೋಧನೆ / ತರಬೇತಿ ನೀಡುವ ಸಾಮರ್ಥ್ಯ
25. ಸಮಯ ನಿರ್ವಹಣಾ ಸಾಮರ್ಥ್ಯ.
Competitive Examination Preparation - Article in Vijaykarnataka 26 Nov 2012

Makkala Mane - LKG UKG Classes in Hassan Districti - Article in Prajavani 26 Nov 2012




Makkala Mane - LKG UKG Classes in Hassan Districti - Article in Prajavani 26 Nov 2012

 

ನೋಡ ಬನ್ನಿ `ಮಕ್ಕಳ ಮನೆ'

  • November 26, 2012
  • Share  
  • [-]
  • Text
  • [+]

ಹತ್ತು ಮಕ್ಕಳಿಗಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಒಂದೆಡೆ ಸದ್ದಿಲ್ಲದೇ ಜಾರಿಯಾಗುತ್ತಿದ್ದರೆ, ಹಾಸನ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ದಾಖಲೆ ಪ್ರಮಾಣದಲ್ಲಿ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ. 

ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಸರ್ಕಾರದ ಎಲ್.ಕೆ.ಜಿ, ಯು.ಕೆ.ಜಿ, ಪ್ರಿ- ಸ್ಕೂಲ್ ಎಂದೇ ಬಿಂಬಿತವಾಗಿರುವ `ಮಕ್ಕಳ ಮನೆ`ಗಳು ಹಳ್ಳಿಹಳ್ಳಿಗಳಲ್ಲಿ ಜಯಭೇರಿ ಬಾರಿಸುತ್ತಿವೆ. ಕೆಲವು `ಮಕ್ಕಳ ಮನೆ`ಗಳಲ್ಲಂತೂ 90ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ! ಕನ್ನಡ /ಇಂಗ್ಲಿಷ್ ಕಲಿಸುವ 55 `ಮಕ್ಕಳ ಮನೆ`ಗಳ ಜೊತೆಗೆ 3 ಉರ್ದು `ಮಕ್ಕಳ ಮನೆ`ಗಳೂ ಆರಂಭಗೊಂಡಿರುವುದು ಇಲ್ಲಿನ ದಾಖಲೆ!

ಏನಿದು ಮಕ್ಕಳ ಮನೆ?
ಶಾಲಾ ಬಲವರ್ಧನೆ ಯೋಜನೆಯ ಅಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್.ಕೆ.ಜಿ/ ಯು.ಕೆ.ಜಿ ತರಗತಿಗಳನ್ನು ನಡೆಸುವ ಯೋಜನೆಯೊಂದು ರೂಪುಗೊಂಡಿತ್ತು. ಅದರ ಅನ್ವಯ, ಸರ್ಕಾರಿ ಕಾನ್ವೆಂಟ್ `ಮಕ್ಕಳ ಮನೆ` ಯೋಜನೆ 2011- 12ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರಾರಂಭವಾಯಿತು. 

ಮರು ವರ್ಷ ಹಾಸನ ಜಿಲ್ಲೆಯಲ್ಲಿ ಅತ್ಯಂತ ಬಿರುಸಿನಿಂದ ಹೋಬಳಿಗೊಂದರಂತೆ ಎಂದುಕೊಂಡು ಆರಂಭವಾಗಿದ್ದು, ಇದೀಗ 58 ದಾಟಿ 98 ಕೇಂದ್ರಗಳಾಗುವತ್ತ ಮುನ್ನಡೆಯುತ್ತಿದೆ! ಸಾರ್ವಜನಿಕರ ಪ್ರೋತ್ಸಾಹ, ಉತ್ಸಾಹ ಹಳ್ಳಿ ಹಳ್ಳಿಗಳಲ್ಲಿ `ಮಕ್ಕಳ ಮನೆ`ಗಳನ್ನು ತೆರೆಯುವತ್ತ ಸಾಗಿದೆ! 

`ಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ `ಮಕ್ಕಳ ಮನೆ` ಮಾದರಿಯ ಪೂರ್ವ ಪ್ರಾಥಮಿಕ ಕಲಿಕಾ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆದಿದೆ. ಹಾಸನ ಜಿಲ್ಲೆಯ `ಮಕ್ಕಳ ಮನೆ`ಗಳ ಯಶಸ್ಸನ್ನು ಗಮನಿಸಿದಾಗ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಖಾತ್ರಿಪಡಿಸಿಕೊಳ್ಳಲು, ಗುಣಾತ್ಮಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮಕ್ಕಳೆಲ್ಲರನ್ನೂ ಶಾಲಾ ವಾತಾವರಣಕ್ಕೆ ಕರೆತರಲು ಇದೊಂದು ಸಾಧನವಾಗಲಿದೆ` ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಸನದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

`ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳು ದಾಖಲಾಗುವಂತೆ ಪ್ರೇರೇಪಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಎ.ಟಿ.ಚಾಮರಾಜ್ (ಈಗ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ), ಸರ್ವ  ಶಿಕ್ಷಣ ಅಭಿಯಾನ ಯೋಜನೆಯ ಉಪಯೋಜನಾ ಸಮನ್ವಯಾ ಧಿಕಾರಿ ಎಂ.ಎಸ್.ಫಣೀಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಆಸಕ್ತಿಯಿಂದ ಈ ದಾಖಲೆ ಸಾಧ್ಯವಾಗಿದೆ` ಎಂದು ಸಚಿವರು ಶ್ಲಾಘಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು?
ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಮತ್ತು ಹಾಸನಗಳಲ್ಲಿರುವ 58 ಮಕ್ಕಳ ಮನೆಗಳಲ್ಲಿ ಒಟ್ಟು 2650 ಮಕ್ಕಳು ದಾಖಲಾಗಿದ್ದಾರೆ. ಪ್ರತಿ `ಮನೆ`ಯಲ್ಲೂ ಕನಿಷ್ಠ 30 ರಿಂದ ಗರಿಷ್ಠ 80ರವರೆಗೆ ಮಕ್ಕಳಿದ್ದರೆ, ಅರಸೀಕೆರೆ ತಾಲ್ಲೂಕು ಬಾಣಾವರದ ಮಕ್ಕಳ ಮನೆಯಲ್ಲಿ 178, ದೊಡ್ಡಮೇಟಿ ಕುರ್ಕೆಯಲ್ಲಿ 96, ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿಯಲ್ಲಿ 92 ಮಕ್ಕಳಿರುವುದು ದಾಖಲೆಯಾಗಿದೆ. 

`ಮಕ್ಕಳ ಮನೆ` ಆರಂಭಿಸಲು ಉಳಿದ ಹಳ್ಳಿಗಳಿಂದಲೂ ಬೇಡಿಕೆ ಬರುತ್ತಲೇ ಇದೆ! ಮಕ್ಕಳಿಗೆ ಬೇಕಾದ ಕಲಿಕಾ ವಾತಾವರಣ ನಿರ್ಮಿಸುವ ಸಲುವಾಗಿ ಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಮೇಶ್ ಮತ್ತು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಸ್ಥಳೀಯ ಸಲಹಾ ಸಮಿತಿ ರಚನೆಯಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಒಂದೊಂದು ಮಕ್ಕಳ ಮನೆ ಇರಬೇಕು ಎನಿಸುವಂತೆ ಮಾಡುವಲ್ಲಿ ಸಮಿತಿ ಯಶಸ್ವಿಯಾಗಿದೆ.

`ಮಕ್ಕಳ ಮನೆ`ಯ ಮಕ್ಕಳಿಗೆ ಸಮವಸ್ತ್ರ, ಟೈ, ಶೂ, ಸಾಕ್ಸ್, ನೋಟ್ ಪುಸ್ತಕಗಳು, ಪೆನ್ಸಿಲ್, ಕ್ರಯಾನ್ಸ್, ಪೇಂಟ್, ಡೆಸ್ಕ್, ಕುರ್ಚಿ, ಮೇಜು, ಚಾಪೆ, ಜಮಖಾನ, ಆಟದ ಸಾಮಗ್ರಿ ಸೇರಿದಂತೆ ಅಗತ್ಯವಾದ ವಸ್ತುಗಳನ್ನು ಒದಗಿಸಲು ಮತ್ತು ಶಿಕ್ಷಕರ ಗೌರವ ಧನಕ್ಕಾಗಿ ಮಾಡಲಾದ ಒಟ್ಟು ಖರ್ಚು 21.63 ಲಕ್ಷ ರೂಪಾಯಿಯಾಗಿದ್ದು, ಈ ಮೊತ್ತವನ್ನು ಸಾರ್ವಜನಿಕರ ದೇಣಿಗೆಯಿಂದಲೇ ಭರಿಸಲಾಗಿದೆ.

ಈ ಯಶಸ್ಸಿಗೆ ಗರಿ ಮೂಡಿಸುವಂತೆ ಹಾಸನ ಜಿಲ್ಲಾ ಪಂಚಾಯಿತಿ 11 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿ, ಇತರ ಹಳ್ಳಿಗಳಲ್ಲೂ `ಮಕ್ಕಳ ಮನೆ` ಆರಂಭಿಸಲು ಹುರಿದುಂಬಿಸುತ್ತಿದೆ! ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಜಿಲ್ಲಾ ಕಚೇರಿಯಿಂದ 7.5 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, 31 `ಮಕ್ಕಳ ಮನೆ`ಗಳ ಕಾರ್ಯಕ್ರಮಗಳಿಗೆ ಈ ಅನುದಾನ ಬಳಕೆಯಾಗುತ್ತಿದೆ. ಉಳಿದವು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುತ್ತಿವೆ.

ಹೀಗಿರಬೇಕು `ಮಕ್ಕಳ ಮನೆ`
ಹೆಚ್ಚುವರಿ ಕೊಠಡಿಗಳು ಲಭ್ಯವಿರುವಲ್ಲಿ ಬೋಧನಾ ಕೊಠಡಿ (ಆಡುತ್ತಾ, ನಲಿಯುತ್ತಾ ಮಕ್ಕಳು ಕಲಿಯುವಂತೆ ಪ್ರೇರೇಪಿಸುವ ತಾಣ), ವಿಶ್ರಾಂತಿ ಕೊಠಡಿ (ಮೆತ್ತನೆ ಹಾಸಿಗೆ / ಜಮಖಾನ ಸಹಿತ), ಧ್ಯಾನ, ಯೋಗ, ಮಂತ್ರ ಪಠಣ, ಭಜನೆ ಕೊಠಡಿ (ಒಂದು ಫೋಟೊ ಮತ್ತು ದೀಪ), ಒಳಾಂಗಣ ಕ್ರೀಡಾ ಕೊಠಡಿ (ಚಿಕ್ಕ ಮಕ್ಕಳು ಆಟ ಆಡುವಂತಹ ಕ್ರೀಡಾ ಉಪಕರಣಗಳು/ ದೇಶೀಯ ಕ್ರೀಡೆಗೆ ಸಂಬಂಧಿಸಿದಂತಹ ಕ್ರೀಡಾ ಉಪಕರಣಗಳು,

ಕಲಿಕಾ ಉಪಕರಣಗಳು ಹಾಗೂ ಅದಕ್ಕೆ ಅನುಗುಣವಾದ ಪೀಠೋಪಕರಣಗಳು), ವಾರದಲ್ಲಿ ಎರಡು ದಿನ ನೃತ್ಯ, ಚಿತ್ರಕಲೆ ಕಲಿಸಲು ನೃತ್ಯ- ಚಿತ್ರ ಕೊಠಡಿ, ತೆರೆದ ಗ್ರಂಥಾಲಯ (ಮಕ್ಕಳ ಕಥೆ ಪುಸ್ತಕಗಳನ್ನು ಇರಿಸಿದ ಅಜ್ಜಿ ಮನೆ), ಧೃಕ್- ಶ್ರವಣ ಕೊಠಡಿ (ಟಿ.ವಿ, ಕಂಪ್ಯೂಟರ್, ಡಿ.ವಿ.ಡಿ ಪ್ಲೇಯರ್, ಸಿ.ಡಿ ಇತ್ಯಾದಿ) ಎಂದು ಪ್ರತ್ಯೇಕ ವಿಭಾಗಗಳನ್ನು ತೆರೆಯಲು ಅವಕಾಶವಿದೆ. ಕೊಠಡಿಗಳು ಲಭ್ಯವಿಲ್ಲದ ಕಡೆ, ಇರುವ ಕೊಠಡಿಗಳನ್ನೇ ಹೊಂದಿಸಿಕೊಂಡು ವೇಳಾಪಟ್ಟಿಯನ್ನು ತಯಾರಿಸಿ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಬ್ಯಾನರ್, ಕರಪತ್ರ, ಗೋಡೆಬರಹ, ಪೋಷಕರ ಭೇಟಿ ಇತ್ಯಾದಿಗಳ ಮೂಲಕ ಕಳೆದ ಮಾರ್ಚಿಯಿಂದಲೇ `ಮಕ್ಕಳ ಮನೆ`ಯ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು.

ಖರ್ಚು-ವೆಚ್ಚದ ನಿರ್ವಹಣೆ ಹೇಗೆ?
ಮಕ್ಕಳ ಮನೆಯ ಖರ್ಚು-ವೆಚ್ಚಗಳಿಗಾಗಿ ಪ್ರತ್ಯೇಕ ಸರ್ಕಾರಿ ಅನುದಾನವೇನೂ ಇಲ್ಲ. ಸರ್ವ ಶಿಕ್ಷಣ ಅಭಿಯಾನ ಯೋಜನೆ, ಶಾಲಾ ಬಲವರ್ಧನೆ ಯೋಜನೆಯ ಅಡಿ ಅಲ್ಪ ಹಣಕಾಸಿನ ನೆರವು, ಅದೂ ಪಾಠೋಪಕರಣ- ಪೀಠೋಪಕರಣ- ಕ್ರೀಡೋಪಕರಣಗಳಿಗೆ ಅಷ್ಟೇ. ಉಳಿದಂತೆ `ಮಕ್ಕಳ ಮನೆ`ಗೆ ಬರುವ ಮಕ್ಕಳ ಪೋಷಕರು, ಸಾರ್ವಜನಿಕರ ದೇಣಿಗೆ, ಜನಪ್ರತಿನಿಧಿಗಳ ಪ್ರೋತ್ಸಾಹ ಧನ, ಸಂಘ ಸಂಸ್ಥೆಗಳ ಸಹಭಾಗಿತ್ವ, 

ಗ್ರಾಮ ಪಂಚಾಯಿತಿ, ಎ.ಪಿ.ಎಂ.ಸಿ, ಮುಖ್ಯೋಪಾಧ್ಯಾಯರ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಅಭಿವೃದ್ಧಿ ಸಮಿತಿ ರಚಿಸಿಕೊಳ್ಳಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತುದಾರರನ್ನಾಗಿ ನೇಮಿಸಿಕೊಂಡು, ಗೌರವಧನವನ್ನೂ ಸ್ಥಳೀಯ ಸಮಿತಿಯಿಂದಲೇ ದೊರಕಿಸಿಕೊಡುವ ಪ್ರಯತ್ನ ಸಾಗಿದೆ.  

ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಡೊನೇಷನ್, ಫೀಸು, ಪುಸ್ತಕ ಎಂದೆಲ್ಲಾ ಸಾವಿರಗಟ್ಟಲೆ ಹಣ ಸುರಿಯುವ ಬದಲು ಪೋಷಕರೇ 50 ರಿಂದ 100 ರೂಪಾಯಿಯಷ್ಟು ಶುಲ್ಕ ನೀಡಲು ಮುಂದೆ ಬಂದಿದ್ದಾರೆ. ಹೀಗೆ ಸಂಗ್ರಹಿಸಲಾದ ಮೊತ್ತಕ್ಕೆ ಇತರ ಮೂಲಗಳಿಂದ ಇನ್ನಷ್ಟು ಹಣ ಒಟ್ಟುಗೂಡಿಸಿ ಖರ್ಚು- ವೆಚ್ಚ ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಒಂದು ನಿರ್ದಿಷ್ಟ ರೂಪ ದೊರೆತರೆ, ರಾಜ್ಯದಾದ್ಯಂತ ಚಿಣ್ಣರೆಲ್ಲಾ `ಮಕ್ಕಳ ಮನೆ` ಎಂಬ ಈ ಸರ್ಕಾರಿ ಕಾನ್ವೆಂಟ್‌ಗಳಲ್ಲಿ ನಲಿಯುತ್ತಾ ಕಲಿಯುವ ದಿನ ದೂರವಿಲ್ಲ!

ಹೀಗಿದೆ ವೇಳಾಪಟ್ಟಿ 

ಪ್ರತಿ ದಿನ ಬೆಳಿಗ್ಗೆ 9.15 ರಿಂದ ಸಂಜೆ 4ರವರೆಗೆ ಸಾಮಾನ್ಯ ಶಾಲೆಯಂತೆಯೇ 40 ನಿಮಿಷಗಳ ತರಗತಿ ನಡೆಯುವ ಮಕ್ಕಳ ಮನೆಯಲ್ಲಿ ಧ್ಯಾನ- ಯೋಗ, ಕನ್ನಡ ಭಾಷಾ ಚಟುವಟಿಕೆ, ಕಥೆ ಹೇಳುವ ಅಜ್ಜಿ ಮನೆ, ಗಣಿತ ಚಟುವಟಿಕೆ, ಒಳಾಂಗಣ ಆಟಗಳು, ಆಂಗ್ಲ ಭಾಷಾ ಚಟುವಟಿಕೆ, ಹಾಡು, ಹೊರಾಂಗಣ ಆಟಗಳು, ನೃತ್ಯ, ಚಿತ್ರಕಲೆ, ಕಂಪ್ಯೂಟರ್ ತರಬೇತಿ ಇತ್ಯಾದಿ ಚಟುವಟಿಕೆಗಳು ನಿಯಮಿತವಾಗಿ ನಡೆಯುತ್ತವೆ. ನಡುವೆ ಎರಡು ಬಾರಿ ಹತ್ತು ನಿಮಿಷಗಳ ವಿರಾಮ ಮತ್ತು ಮಧ್ಯಾಹ್ನದ ಊಟದ ವಿರಾಮ ಇರುತ್ತದೆ.           
Slide Show

ಚಿತ್ರಗಳು; ಪ್ರಕಾಶ್, ಹಾಸನ
slidebtn
2 to 2
slidebtn

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...